ಸದಾ ರಾಜಕೀಯದ ಜಂಜಾಟದಲ್ಲಿ ಮುಳುಗಿ ಹೋಗಿರುವ ಕರ್ನಾಟಕದ ರಾಜಕಾರಣಿಗಳು ಈಗ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಸೂಪರ್ ಚಿತ್ರವನ್ನು ವೀಕ್ಷಿಸಲಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರೇ ಸ್ವತಃ ಈ ವಿಷಯವನ್ನು ಉಪೇಂದ್ರ ಅವರಲ್ಲಿ ಹೇಳಿಕೊಂಡಿದ್ದಾರೆ.
ತಮ್ಮ ಸಚಿವ ಸಂಪುಟದ ಸಹದ್ಯೋಗಿಗಳು ಹಾಗೂ ಪಕ್ಷದ ಪ್ರಮುಖರೊಂದಿಗೆ ‘ಸೂಪರ್ ಚಿತ್ರವನ್ನು ವೀಕ್ಷಿಸುವುದಾಗಿ ಸಿ.ಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಸಂಕ್ರಾಂತಿ ಹಬ್ಬಕ್ಕಾಗಿ ಖಾಸಗಿ ವಾಹಿನಿಯೊಂದಕ್ಕೆ ಉಪೇಂದ್ರ ಅವರು ಮುಖ್ಯಮಂತ್ರಿಗಳನ್ನು ಸಂದರ್ಶನ ಮಾಡುವುದಕ್ಕೆ ತೆರಳಿದ ಸಮಯದಲ್ಲಿ ಮುಖ್ಯಮಂತ್ರಿಗಳು ಈ ವಿಷಯವನ್ನು ಪ್ರಸ್ತಾಪಿಸಿದರು. ಅಲ್ಲದೆ ನಿಮ್ಮ ಚಿತ್ರದ ಬಗ್ಗೆ ಬಹಳ ಜನರಿಂದ ಪ್ರಶಂಸೆ ಮಾತು ಕೇಳಿದ್ದೇನೆ. ಒಳ್ಳೆಯ ಪ್ರಯತ್ನ ಮಾಡಿದ್ದೀರಿ ಎಂದು ಎಲ್ಲರೂ ಹೇಳಿದ್ದಾರೆ. ನಿಮ್ಮ ಸಿನಿಮಾ ನೋಡುವ ಆಸಕ್ತಿಯಿದೆ. ಆದಷ್ಟು ಬೇಗ ವೀಕ್ಷಿಸುತ್ತೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.